ದೇವಾಮೃತ ಗಂಗೆ//ರಘುನಂದನ ಕೆ.
ಹೂವರಳಿ ನಗುತಿತ್ತು
ಇಬ್ಬನಿಯು ಮುಸುಕಿತ್ತು
ಅಂಗಳದ ತುಂಬ ಸ್ವಪ್ನ ಹಾಸಿತ್ತು
ಬಾಗಿಲಿಲ್ಲದ ಗುಡಿಸಲೆದುರು
ಬಡವನೆಂಬ ಭೇದ ಜಗದೊಳಗೆ
ಯಾವುದೂ ಮಿಗಿಲಲ್ಲ ಆಗಸದ ಕೆಳಗೆ
ಕಣ್ ಕಾಣ್ಕೆ ಚೆಲುವು
ಮನದೊಳಗಿಂದ ಒಲವು
ಮನದೊಳಗಿಂದ ಒಲವು
ಶಾಪಗಳ ದಾಟದಿರಲು
ಅನಿಕೇತನದ ಹಸಿವಿಲ್ಲ ಜಗದೆದುರು
ನೋಟಗಳ ಗುಂಗಿಲ್ಲ ರವಿಗೆ
ಗೋಡೆಗಳ ಹಂಗಿಲ್ಲ ಭುವಿಗೆ
ನೀ ಮುಟ್ಟದಿರು, ನೆಲವ ಮೆಟ್ಟದಿರು
ಬಿಟ್ಟೆದ್ದರೂ ಬಿಡದಂತಿರು
ಹೋರಾಡು ಹಾರಾಡು ಹೆಸರಿಗೆ
ಹಣ ಹೊರಳಿ ಹೆಣವುರಳಿ
ಉಸಸಿರಿಲ್ಲ ಕಳೆಬರಗಳ ಸ್ವಪ್ನದಲ್ಲಿ
ಕೆಸರ ಮಸಿಯಿಲ್ಲ ಹಸಿರಿಗೆ
ಹೆಸರ ಹಸಿವಿಲ್ಲ ಉಸಿರಿಗೆ
ಕೈ ಮುಗಿದು ತಲೆಬಾಗಿ
ಒಳಗಿಲ್ಲ ಹೊರಗಿಲ್ಲ
ಸುತ್ತೆಲ್ಲ ಹುಡುಕಿ ಸತ್ತು ಸಂತನಾಗು
ಊರೊಳಗೊಬ್ಬ ಊರಾಚೆಗೊಬ್ಬ ಜಗದ್ಗುರು
ಧರ್ಮ ಕರ್ಮಗಳ ಬಂಧವಿಲ್ಲ ಭಕ್ತಿಗೆ
ಅಂದ ಚೆಂದಗಳ ಗಂಧವಿಲ್ಲ ಮುಕ್ತಿಗೆ
* * * * * * * * * *
ಚಿತ್ರಕೃಪೆ : ಅಂತರ್ಜಾಲ