ಕಾವ್ಯ ಲಹರಿ//ರಘುನಂದನ ಕೆ.
ಮಾಗಿಯ ಬಿರು ಛಳಿಯ
ಇರುಳಲ್ಲೇ ಇರಬೇಕು
ಹೀಗೆಲ್ಲ ಜ್ಞಾನೋದಯವಾಗುವುದು;
ಮತ್ತೇನಿಲ್ಲ ಇಷ್ಟೇ
ಶರಣಾಗದೇ ಭಾವ ಸ್ಪುರಿಸದು
ಬೆತ್ತಲಾಗದೇ ಭವ ಕಳೆಯದು!!
2
ಸಮುದ್ರ ತೀರದ ಬಯಲ
ಶಿಶಿರದ ಛಳಿ ಬೆಚ್ಚಗಾದಂತೆ
ಅರಳಿ ಕೆರಳಿ ಹೊರಳಿ
ಬಳಲಿದಾಗ
ಬೆವರಿದ ನಮ್ಮಿಬ್ಬರ ಮೈ ತುಂಬ
ಮರಳು ಮರಳು !!
ಅಲೆಯ ಸಪ್ಪಳಕ್ಕೀಗ
ಪುರುಷ ಸೂಕ್ತದ ಮೊಳಗು !!
ಯತ್ ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ?
3
ಶಿಶಿರದ ನಾಭಿ ಕಂಪನಕೆ
ಇರುಳೊಳಗೆ ಹರೆಯ ಬಿರಿದು
ಹೂವೆದೆ ಅರಳಿ ಘಮ ಕೆರಳಿ
ನಮ್ಮೊಳಗು ಕರಗಿ
ಚಡಪಡಿಸೊ ಹೊತ್ತು
ಪರವಶದ ಉಸಿರಲ್ಲಿ
ಸುಮಧುರ ನೋವ ಘಮಲು
ಉನ್ಮತ್ತ ಸುಪ್ತ ಸರ್ಪಿಣಿಯ ಠೇಂಕಾರಕೆ
ಮೂಲಾಧಾರ, ಸ್ವಾಧಿಷ್ಟಾನ ಪ್ರಕಂಪನ
ಚಿತ್ರಕೃಪೆ : ಅಂತರ್ಜಾಲ