ಕಾವ್ಯ ಲಹರಿ//ರಘುನಂದನ ಕೆ.
1
ತಿರುಗುವ ಚಕ್ರ
ಉರಿಯುತ್ತಿದೆ ದೀಪ
ಜೀವದ ಬತ್ತಿಗೆ
ಜನ್ಮಾಂತರದ ಎಣ್ಣೆ ಪಾಪ;
ಕಾಯುತ್ತಿದ್ದೇನೆ
ಸೂರ್ಯ ಮುಳುಗುತ್ತಾನೆಂದು
ಮಾತು ನಿಲ್ಲುತ್ತದೆಂದು
ಮೌನಕ್ಕೆ ನಾಲಿಗೆ ಬೇಡ
ಕರುಣೆಯಿರಲಿ, ಆಮೆನ್
2
ಪೇರಿಸಿಟ್ಟ ಕಲ್ಲುಗಳ ಗೋಡೆ
ಹಾರಾಡುವ ಶಬ್ದ ಭಂಡಾರ
ಅರೆ ಬರೆ ಎಚ್ಚರ
ಬೇಕೇ ಅಷ್ಟೆಲ್ಲ ಅಕ್ಷರ
ಗೊತ್ತಿದೆ, ಸುಲಭವಲ್ಲ
ಶಬ್ದಕೋಶ ಓದುವುದು
ಮುಗಿಯಲಿ ಬೇಗ
ಮೌನಕ್ಕೆ ಗ್ರಂಥಗಳಿಲ್ಲ
ದಯೆಯಿರಲಿ, ಆಮೆನ್
3
ಅರೆರೆ, ಎಷ್ಟೊಂದು ಶಬ್ದಗಳಿವೆ
ಮಾತೇ ಮುಗಿಯುತ್ತಿಲ್ಲ ಇಲ್ಲಿ
ಮನಸ್ಸಿಗೂ ಶಬ್ದಗಳದೇ ಹಂಗು
ಇನ್ನು ಮನುಷ್ಯನ ಮಾತೇಕೆ..??
ಅರ್ಥ ಅರಳುವ ವೇಳೆಗೆ
ಸೂರ್ಯನೂ ಕರಗಿ ರೆಪ್ಪೆ ಭಾರ
ಅರ್ಥ ನಿರರ್ಥಕವಾಗಿ
ಕಾಲ ವ್ಯರ್ಥವಾಗದಂತೆ
ಸ್ವಲ್ಪ ಎಚ್ಚರ ಕೊಡು,
ಹಾಗೇ ಮೌನವನ್ನೂ…!!
ಚಿತ್ರಕೃಪೆ : ಅಂತರ್ಜಾಲ