ಸಾಗರ ಸಮ್ಮುಖ//ರಘುನಂದನ ಹೆಗಡೆ.
ನಕ್ಕ ಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ;
ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ!
ಅರೆ, ಅವಳ್ಯಾಕೆ ನಕ್ಕ ಹಾಗೆ ನಟಿಸುತ್ತಿದ್ದಾಳೆ, ಅವಳ ನಟನೆ ಯಾರಿಗಾಗಿ, ಅವನದ್ಯಾಕೆ ಸುಮ್ಮನೆ ನಗು ಎನ್ನುತ್ತಿದ್ದಾನೆ, ನಗುವನ್ನ ಹುಟ್ಟಿಸಲು ಅವನಲ್ಲಿ ಕಾರಣಗಳೇ ಕಳೆದು ಹೋಗಿದ್ಯಾ, ಅವಳ ಸಹಜ ನಗುವನ್ನ ಕದ್ದು ನಟಿಸುವಂತೆ ಮಾಡಿದ್ಯಾವದು, ಅವಳಲ್ಲಿ ಅವಳ ಒಲವಿನ ಒಳಮನೆಯಲ್ಲಿ ಅದ್ಯಾವ ಕಾವು ಸುಡುತ್ತಿದೆ, ಕತ್ತಲೆ ಏಕೆ ಆವರಿಸಿದೆ, ಅವನು ಬೆಳಕಾಗಿಸಲು ತಂಪಾಗಿಸಲು ಏನು ಮಾಡಲಾರನಾ, ಅವನದ್ಯಾಕೆ ಹಾರೈಕೆಯ ಮಾತನ್ನಾಡುತ್ತಿದ್ದಾನೆ ಹೀಗೆಲ್ಲ ಪ್ರಶ್ನೆಗಳ ಹುಟ್ಟಿಸುತ್ತ ಎದುರಾಗುತ್ತದೆ ಕೆ. ಎಸ್. ನರಸಿಂಹಸ್ವಾಮಿಯವರ ‘ನಕ್ಕು ಬಿಡು’ ಕವನದ ಮೊದಲೆರಡು ಸಾಲು.
ಕವನದ ಪೂರ್ಣತೆಯಲ್ಲಿ ಹೀಗೊಂದು ಅವಳು ಹಾಗೊಬ್ಬ ಅವನು ಸಿಕ್ಕುತ್ತಾರೆ. ಆದರೆ ಈ ಎರಡು ಸಾಲುಗಳಲ್ಲಿ ಅವಳು ಅವನೂ ಆಗಬಹುದು, ಅವನು ಅವಳೂ. ಅಷ್ಟಕ್ಕೂ ಮನಸ್ಸೆನ್ನುವುದು ಅವಳಿಗೂ ಅವನಿಗೂ ಇಬ್ಬರಿಗೂ ಇರುತ್ತದಲ್ವಾ. ಒಳಮನೆಯಲ್ಲಿ ಕಾವು ಯಾರಿಗೂ ಕಾದಿರಬಹುದು ತಾನೆ. ಅಷ್ಟಕ್ಕೂ ಸುಮ್ಮನೆ ನಗುವೊಂದು ಅರಳುತ್ತದಾ. ಸುಮ್ಮಸುಮ್ಮನೆ ನಕ್ಕುಬಿಟ್ಟರೆ ಅದು ನಟನೆಯಾಗದಾ. ಅವಳೊಲವಿನ ಒಳಮನೆಯಲ್ಲಿ ಕುಳಿತಿರುವವರಾರು, ಆ ಒಳಮನೆಯ ಕಾವು, ಕತ್ತಲೆ ಅವನನ್ನ ಕಾಡುತ್ತಿದೆಯಾ, ಅವನನ್ನ ಖುಷಿಯಾಗಿಡಲು ಅವಳು ನಕ್ಕ ಹಾಗೆ ನಟಿಸುತ್ತಿದ್ದಾಳಾ, ಅದು ಗೊತ್ತಾಗಿ ಅವನ ಜೀವ ಚಡಪಡಿಸಿ ಅವಳ ಒಳಮನೆಯಲ್ಲಿ ಬೆಳಕಾಗಲಿ, ತಂಪಾಗಲಿ ಎಂದು ಹಾರೈಸುತ್ತಿದ್ದಾನಾ?? ಎರಡೇ ಸಾಲುಗಳು ಎಲ್ಲೆಲ್ಲೋ ಕರೆದೊಯ್ದು ಏನೇನೋ ಹುಡುಕಾಟಕ್ಕೆ ಹಚ್ಚಿಬಿಟ್ಟು ಸತಾಯಿಸುತ್ತದೆ. ಹೀಗೆ ಹುಡುಕುತ್ತ ಹೋದರೆ ಎರಡೇ ಸಾಲು ನಮ್ಮೊಳಗೊಂದು ಅವ್ಯಕ್ತ ನೋವಿನ ಕಥೆಯನ್ನೇ ತಂದು ಬಿಡಬಲ್ಲದೇನೋ.
ಹೀಗೆ ಒಂದಷ್ಟು ಪ್ರಶ್ನೆಗಳ ಮೂಡಿಸುತ್ತ ಶುರುವಾಗುತ್ತದೆ ಕವನ. ಮುಂದುವರೆಯುತ್ತ ಅಷ್ಟಷ್ಟೆ ಸ್ಪಷ್ಟವಾಗುತ್ತಾ, ಸ್ಪಷ್ಟವಾದ ಮೇಲೂ ಅಸ್ಪಷ್ಟವಾಗಿಯೇ ಉಳಿಯುತ್ತ ಬೆಳೆಯುತ್ತ ಹೋಗುತ್ತದೆ. ಹಾರೈಕೆಯೊಂದಿಗೆ ಶುರುವಾದಂತಿರುವ ಕವನ ಮುಂದಿನ ಸಾಲುಗಳಿಗೆ ಹೊರಳುವಷ್ಟರಲ್ಲಿ ಮತ್ತಷ್ಟು ಹಾರೈಕೆಗಳಾಗುತ್ತದೆ. ಮೊದಲೆರಡು ಸಾಲುಗಳ ವಿಷಾದವನ್ನ ದಾಟಿ ಸುಖದ ಆಶಯದ ಬೆಳದಿಂಗಳ ಚೆಲ್ಲುತ್ತದೆ ಕವನ ಈ ಮುಂದಿನ ಸಾಲುಗಳಲ್ಲಿ.
ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ!
ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!
ಬಾನತುಂಬ ತಾರೆ ಮಿನುಗಿ, ನಿನಗೆ ಶುಭವ ಕೋರಲಿ!
ಹೂ ಬೇಲಿಯ ಹಾದಿಯಲ್ಲಿ ಬೆಳ್ಳಿಹಕ್ಕಿ ಹಾಡಲಿ!
ಬೆಳದಿಂಗಳು ಅರಳುವ ಅಲೆಗಳ ಸೊಗಸನ್ನ ಒಲವಾಗಿಸಿ, ಆ ಒಲವ ತೆರೆಗಳಲ್ಲಿ ಮತ್ತಷ್ಟು ಬೆಳದಿಂಗಳ ತುಂಬಿ ಮಲ್ಲಿಗೆ ಹೂವರಳಿಸುವ ಹಸಿರು ಕನಸಿನ ಆಶಯ ಅವನದು. ತಾರೆ, ಚಂದ್ರ, ಬೆಳದಿಂಗಳೆಲ್ಲವ ಕರೆದು ಶುಭ ಕೋರುತ್ತವೆ ಸಾಲುಗಳು. ಯಾರು ಯಾರಿಗೂ ಹಾರೈಸಬಹುದಾದ ಸುಲಭ ಸಾಲುಗಳಂತೆ ಗೋಚರಿಸುತ್ತಲೇ ಮೊದಲೆರಡು ಸಾಲಿನ ವಿಷಾದಕ್ಕೆ ಹೊಂದಿ, ಅವಳ ಕನಸಲ್ಲಿ ಇವೆಲ್ಲ ಈಗ ಯಾಕಿಲ್ಲ ಎನ್ನುವ ಸಣ್ಣ ಸಂದೇಹವೊಂದನ್ನ ಉಳಿಸಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಮತ್ತೆ ಹೂ ಬೇಲಿಯ ಬಂಧನಕ್ಕೆ ತಳ್ಳುತ್ತದೆ.
ನಿಜ, ಮೂರು ಸಾಲುಗಳ ದಾಟುತ್ತಿದ್ದಂತೆ ಸಣ್ಣ ತಡೆ, ಹೂ ಬೇಲಿಯ ಹಾದಿ ಕೇಳಲೇನೋ ಚೆನ್ನ ಹಾರೈಕೆಯೇ ಎನಿಸಿದರೂ, ಹೂವಿನದ್ದೇ ಆದರೂ ಬೇಲಿ ಬೇಲಿಯೇ ಅಲ್ಲವಾ. ಅಲ್ಲಿಗೆ ಹಾದಿ ನಿಚ್ಚಳ, ಹೂ ಬೇಲಿಯ ನಡುವೆಯೇ ಸಾಗಬೇಕು. ಕನಸಲ್ಲಿ ಮಲ್ಲಿಗೆ ಅರಳುವಾಗ ಹಾದಿಯನ್ನ ಹೂ ಬೇಲಿ ಬಂಧಿಸುತ್ತದೆ. ಅಲ್ಲಿಗೆ ಎಲ್ಲ ಹಾರೈಕೆಯ ಖುಷಿಗೂ ಒಂದು ಬಂಧನವಿದೆ. ಒಂದು ದಾರಿಯಿದೆ. ಎಲ್ಲ ಹಾರೈಕೆಗಳೂ ಆ ಹಾದಿಯಲ್ಲೇ ಹಾಡಾಗಬೇಕು. ಹಸಿರು ಕನಸಿನ ಲೋಕದಲ್ಲಿ ತಾರೆ, ಬೆಳದಿಂಗಳಿನಂತ ಎತ್ತರೆತ್ತರದ ಆಶಯ, ಆದರೆ ವಾಸ್ತವದ ಉಸಿರ ನಡೆಯಲ್ಲಿ ಪಾದ ಮಾತ್ರ ಹಾದಿಯಲ್ಲೇ ಸಾಗಬೇಕು. ಬೆಳ್ಳಿಹಕ್ಕಿಯ ಹಾಡಲ್ಲೆ ಖುಷಿ ಕಾಣಬೇಕು.
ನೀನೆಲ್ಲೂ ನಿಲ್ಲಬೇಡ; ಹೆಜ್ಜೆ ಹಾಕು ಬೆಳಕಿಗೆ;
ಚಲಿಸು, ನಲ್ಲೆ, ಸೆರಗ ಬೀಸಿ ಮೌನದಿಂದ ಮಾತಿಗೆ.
ಇದುವರೆಗೆ ಯಾರು ಯಾರಿಗಾದರೂ ಹೇಳುತ್ತಿದ್ದಿರಬಹುದಾದ ಮಾತುಗಳು ಈ ಸಾಲಿನಲ್ಲಿ ‘ನಲ್ಲೆ'ಯ ಪ್ರವೇಶವಾಗುವುದರೊಂದಿಗೆ ಪಾತ್ರಗಳು ಸ್ಪಷ್ಟವಾಗುತ್ತವೆ. ಮುಂದಿನ ಸಾಲುಗಳೆಲ್ಲಾ ಹೀಗೆ ಅಷ್ಟಷ್ಟೆ ಸ್ಪಷ್ಟವಾಗುತ್ತ ಹೋಗುತ್ತವೆ. ಮೊದಲೆರಡು ಸಾಲುಗಳಲ್ಲಿ ಮೂಡುವಂತದ್ದೇ ಪ್ರಶ್ನೆಗಳು ಮತ್ತಿಲ್ಲೂ ಎದುರಾಗುತ್ತವೆ. ಅವಳ್ಯಾಕೆ ನಿಂತಿದ್ದಾಳೆ, ಅವಳ ಮೌನಕ್ಕೇನು ಕಾರಣ, ಅವಳ್ಯಾಕೆ ಮಾತಾಡಬೇಕು, ಅವಳ ಮೌನ ಅವನನ್ನ ಕಾಡುತ್ತಿದೆಯಾ, ಕೊಲ್ಲುತ್ತಿದೆಯಾ, ಅವಳು ಮಾತಿಗೆ ಚಲಿಸಲಾಗದ್ದಂತದ್ದನ್ನ ಅವನೇನು ಮಾಡಿದ್ದಾನೆ, ಅವ ಹೇಳುತ್ತಿರುವ ಬೆಳಕು ಅವಳಿಗೂ ಬೆಳಕಾಗಬಲ್ಲದಾ??
ನಿಲ್ಲಬೇಡ ಎಂದರೆ ಅವಳೀಗ ನಿಂತಿದ್ದಾಳಾ, ನಿಲ್ಲುವ ಯೋಚನೆಯಲ್ಲಿದ್ದಾಳಾ, ಚಲಿಸು ಎನ್ನುವ ಮಾತಲ್ಲೆ ನಿಂತು ಬಿಡಬಲ್ಲ ಭಯವೂ ಇದೆಯಾ ಹೀಗೆಲ್ಲ ಎನ್ನಿಸಿ ಭಾವ, ಪ್ರಶ್ನೆ ಮತ್ತಷ್ಟು ದಟ್ಟವಾಗುತ್ತದೆ. ಅವಳಿಗೆ ಶುಭ ಹಾರೈಸಿ ನಡೆಯುವಂತೆ ಅವನೇಕೆ ಉದ್ದೀಪಿಸುತ್ತಿದ್ದಾನೆ. ಅವ ಜೊತೆಗಿದ್ದು ನಡೆಸಲಾರನಾ ಅಥವಾ ನಾ ನಿಲ್ಲುತ್ತೇನೆ ನೀನು ಬೆಳಕಿಗೆ ಹೆಜ್ಜೆ ಹಾಕು ಎನ್ನುತ್ತಿದ್ದಾನಾ, ಅವಳದ್ಯಾಕೆ ಮಾತು ಬಿಟ್ಟಿದ್ದಾಳೆ, ಮಾತಿನೆಡಗೆ ಏಕೆ ಚಲಿಸಬೇಕು, ಮೌನವನ್ನ ಅರ್ಥೈಸಿಕೊಳ್ಳುವ ಹಂತ ದಾಟಿ ಪ್ರೀತಿಗೆ ಮಾತಿನ ಅನಿವಾರ್ಯತೆ ಮೂಡಿಬಿಟ್ಟಿದೆಯಾ ಅವರ ನಡುವೆ. ಅವಳ ಮಾತನ್ನ ಅವನೇ ಕಸಿದಿರಲೂಬಹುದಾ, ಯಾವ ನೋವು ಮಾತ ನಿಲ್ಲಿಸಿ ಮೌನಕ್ಕೆ ದೂಡಿದೆ.
* * * * * * *
ಇಲ್ಲಿಯವರೆಗೆ ಆಂತರಂಗಿಕ ಭಾವಗಳ ಲೋಕದಲ್ಲಿ ಸಂಚರಿಸುತ್ತಿದ್ದ ಕವನ ಇಲ್ಲಿಂದ ಮುಂದೆ ಬಾಹ್ಯ ಪ್ರಪಂಚದೆಡೆಗೆ ಸರಿಯುತ್ತದೆ. ಹಾಗೆ ಬಹಿರಂಗವಾಗುತ್ತಲೇ ಇದುವರೆಗೆ ಮೂಡಿದ್ದ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರವನ್ನೂ ನೀಡುತ್ತ ಹೋಗುತ್ತದೆ. ಸಾಂಗತ್ಯದ ಸುಖ ಹಾಗೂ ನಿಧಾನವಾಗಿ ಆವರಿಸಿಬಿಡುವ ವಿಷಾದವನ್ನ ಕಟ್ಟಿಕೊಡುತ್ತ ಮುಂದುವರೆಯುವ ಕವನದಲ್ಲಿ ಮುಂದಿನ ಸಾಲುಗಳು ಇಂಟರ್ವಲ್ ನಂತರದ ಸಿನೆಮಾದಂತೆ, ಸಣ್ಣ ಪ್ಲ್ಯಾಷ್ಬ್ಯಾಕ್, ಒಂದಷ್ಟು ಹಳೆಯ ಮಧುರ ನೆನಪು, ಮುಂದಿನ ಬದುಕ ಬಗ್ಗೆ ಭರವಸೆ, ಒಲವನ್ನಲ್ಲದಿದ್ದರೂ ಅವಳನ್ನಾದರೂ ಉಳಿಸಿಕೊಳ್ಳುವ ಆಸೆ, ಜೊತೆಗೆ ನಡೆಯುವ ನಿರೀಕ್ಷೆ ಇವೆಲ್ಲ ದಾಖಲಾಗುತ್ತ ಹೋಗುತ್ತವೆ.
ಬೆಟ್ಟದಾಚೆಗೊಂದು ಬಯಲು; ಅದರ ತುಂಬ ಹಸುಗಳು,
ನಿನ್ನ ದನಿಗೆ ಕೊರಲನೆತ್ತಿ ಕುಣಿವ ಕಂದು ಕರುಗಳು
ನಿನ್ನ ಹಾಗೆ ನಿನ್ನೊಲವಿನ ಚಿಲುಮೆಯಂತೆ ಹನಿಗಳು;
ಹತ್ತಿರದಲೆ ಎತ್ತರದಲೆ ನನ್ನ ನಿನ್ನ ಮನೆಗಳು.
ನೀನು ಬಂದ ದಿಕ್ಕಿನಲ್ಲಿ ತಂಗಾಳಿಯ ಪರಿಮಳ;
ಹೂವರಳಿತು ಹಿಗ್ಗಿನಿಂದ ಹಾದಿಗುಂಟ ಎಡಬಲ.
ಹಾರೈಕಗಳ ಮೂಲಕ ಅವಳನ್ನ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಅವ ಈಗ ಹಳೆಯ ಮಧುರ ದಿನಗಳನ್ನ ನೆನಪಿಸಿಯಾದರೂ ಅವಳನ್ನ ನಗಿಸಬಹುದೇ ಎನ್ನುವ ಪ್ರಯತ್ನಕ್ಕಿಳಿದಿದ್ದಾನೆ ಇಲ್ಲಿ. ಹತ್ತಿರದಲೆ ಎತ್ತರದಲೆ ನನ್ನ ನಿನ್ನ ಮನೆಗಳು ಎನ್ನುತ್ತ ಹತ್ತಿರದ ಮನೆಯಲ್ಲಿನ ಸಾಂಗತ್ಯ, ಜೊತೆಗೂಡಿ ನಡೆದ ದಾರಿ, ಬೆಟ್ಟದಾಚೆಯ ಬಯಲಲ್ಲಿ ಒಲವಿನ ಹನಿಗಳು ಚಿಲುಮೆಯಾದ ಕಾಲವನ್ನ ನೆನಪಿಸುತ್ತಾನೆ. ಅವಳ ದನಿಗೆ ಕೊರಲನೆತ್ತಿ ಕುಣಿವ ಕರುಗಳು ಎನ್ನುತ್ತಲೆ ತಾನೂ ಹಾಗೇ ಅಲ್ಲವೆ ಅನ್ನುವ ಭಾವವನ್ನೂ ಬಚ್ಚಿಡುತ್ತಾನೆ. ಅವಳು ಬಂದ ದಿಕ್ಕು ಅವನಿಗೆ ತಂಗಾಳಿಯಾಗಿಯೂ ಪರಿಮಳವಾಗಿಯೂ ಸೋಕುತ್ತದೆ, ಅದೇ ಹಿಗ್ಗಿನಲ್ಲಿ ಬದುಕ ಒಲವ ದಾರಿಯ ಹೂವರಳಿದ್ದನ್ನು ಹೇಳುತ್ತಾನೆ. ಈ ಸಾಲುಗಳಲ್ಲೆಲ್ಲ ಖುಷಿಯ ತುಣುಕುಗಳೇ. ವಿಷಾದ ಹಾಗೂ ಪ್ರಶ್ನೆಗಳಲ್ಲಿದ್ದ ಕವನ ಇಲ್ಲಿ ಸುಖದೆಡೆಗೆ ಹೊರಳುತ್ತದೆ. ಅದೇ ಸುಖದಲ್ಲಿ ನಿಲ್ಲುವಂತಿಲ್ಲ ಮುಂದಿನ ಸಾಲು ಹಿಂದಿನ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ವಿಷಾದದ ಕಾರಣವನ್ನು ತೆರೆದಿಡುತ್ತದೆ.
ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ, ತಿಳಿಯದು:
ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು.
ಎನ್ನುವಾಗ, ಜತೆಯಲ್ಲಿದ್ದ ಅವಳನ್ನ ಬಿಟ್ಟು ಅವ ಮುಂದೆ ಹೋಗಿಬಿಟ್ಟಿದ್ದಾನೆ. ಅವಳ ಹಸಿರು ಕನಸುಗಳಲ್ಲಿದ್ದ ಅವ ಮುನ್ನಡೆದಿದ್ದಾನೆ. ಅವಳು ಮಾತು ಮರೆತಿದ್ದಾಳೆ. ನಗುವೆನ್ನುವುದು ಕಳೆದು ನಟನೆಯಾಗಿದೆ. ಒಂದು ಕಾಲದಲ್ಲಿ ಒಲವ ಪರಿಮಳಕ್ಕೆ ಕಾರಣವಾಗಿದ್ದ ‘ಎಡಬಲ ಹಬ್ಬಿದ ಹೂವರಳಿದ ಹಾದಿ’ ಅವಳು ಹಿಂದೆ ಉಳಿದಾಗ ‘ಹೂ ಬೇಲಿಯ ಹಾದಿ’ ಯಾಗಿ ಇಂದಿಗೆ ಬೇಲಿಯಾಗಿ ಬೆಳೆಯಿತೇ ಎನ್ನುವುದು ಕಾಡುತ್ತದೆ. ಹಿಂದೆ ಮೂಡಿದ್ದ ಪ್ರಶ್ನೆಗಳಿಗೆ ಉತ್ತರವನ್ನ ಅಸ್ಪಷ್ಟವಾಗಿ ನೀಡುತ್ತಲೆ ಇಲ್ಲಿ ಮತ್ತಷ್ಟು ಹೊಸ ಪ್ರಶ್ನೆಗಳಿಗೆ ಕಾರಣವಾಗುತ್ತದೆ ಈ ಸಾಲು.
ಜತೆಯಲ್ಲಿದ್ದ ಅವಳು ಅದೇಕೆ ಹಿಂದೆ ಬಿದ್ದಳು, ಅವನೇಕೆ ಮುಂದೆ ಹೋದ, ಅವಳನ್ನ ಮೀರಿದ ಅಂತ ತುರ್ತು ಅವನಿಗೇನಿತ್ತು, ಅವಳು ಸುಸ್ತಾದಳಾ, ಅವನೊಂದಿಗೆ ನಡೆಯದಾದಳಾ ಎನ್ನಿಸಿ, ಅವನಿಗೆ ತಿಳಿಯದ ಅವಳು ಹಿಂದೆ ಬಿದ್ದ ಕಾರಣವ ಹುಡುಕತೊಡಗುತ್ತೇವೆ. ಹಿಂದೆ ಬಿದ್ದರೆ ಅವ ಮತ್ತೆ ಹಿಂದೆ ಬಂದಾನು ಎನ್ನುವ ನಿರೀಕ್ಷೆಯಾ, ಅವ ಹಿಂತಿರುಗಿ ಅವಳ ಕೈ ಹಿಡಿದು ಮತ್ತೆ ಜೊತೆಗೆ ಕರೆದೊಯ್ದಾನು ಎನ್ನುವ ಆಸೆಯಾ, ಹಿಂದೆ ಉಳಿದು ಅವನ ಗಮನವ ತನ್ನೆಡೆಗೆ ತಿರುಗಿಸಿಕೊಳ್ಳುವ ತನ್ನಿರುವ ನೆನಪಿಸುವ ತಿಳಿಯಪಡಿಸುವ ತುಡಿತವಾ ಯಾವುದಿರಬಹುದು ಅವಳು ಹಿಂದೆ ಬೀಳಲು ಕಾರಣ.
ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು ಎನ್ನುವಲ್ಲಿ ಖುಷಿಯನ್ನೂ ವಿಷಾದವನ್ನೂ ಒಂದೇ ಸಾಲಲ್ಲಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಇದು ನಕ್ಕ ಹಾಗೆ ನಟಿಸಬೇಡ ಎನ್ನುವ ಸಾಲಿಗೆ ಕನೆಕ್ಟಿವಿಟಿಯನ್ನು ಕೊಡುತ್ತಿರುವಂತೆ ಅನಿಸುತ್ತದೆ. ಮಲ್ಲಿಗೆ ಮುಡಿಯುವುದು ಸಂತಸ ಸಂಭ್ರಮದ ಸೂಚಕ, ಬಿಳಿಯ ಸೀರೆ ವಿಷಾದ ವೈಧವ್ಯದ ಸೂಚಕವೂ ಆಗಬಹುದು. ಅಲ್ಲಿಗೆ ಮನದಲ್ಲಿ ಪ್ರೇಮಭಾವಕ್ಕೆ ವೈಧವ್ಯದ ಸೂತಕವಾ, ಹಾಗಾಗೇ ನಗುವ ನಟನೆ ಅನಿವಾರ್ಯವಾ, ವಿಷಾದವನ್ನ ಮುಚ್ಚಿಡಲು, ತೋರಿಕೆಗಾಗಿ ಮಲ್ಲಿಗೆಯ ಮುಡಿವ ಸಂಭ್ರಮದ ನಟನೆಯಾ ಎಂದೆಲ್ಲ ಅನ್ನಿಸಿ, ಪೂರ್ಣ ಕವನ ಇದೇ ಸಾಲುಗಳಲ್ಲಿ ಅಡಗಿದೆಯೇನೋ ಅನ್ನುವಂತೆ ಕಾಡತೊಡಗುತ್ತದೆ.
ಬಿದಿರ ಮೆಳೆಯ ಬಂಗಾರದ ಸೀಮೆಯಾಚೆಗೇನಿದೆ?
ಕೊಳಲ ದನಿಯ ಉಂಗುರಗಳ ಸಂಜೆ ಹಾಡು ಹಬ್ಬಿದೆ.
ಎನ್ನುವಲ್ಲಿ, ಮುಂದಿನ ಬದುಕಿನ ಪ್ರಶ್ನೆಯನ್ನ ಮುಂದಿಟ್ಟು ಉತ್ತರವಾಗುತ್ತಾನೆ. ಅವರ ಚಲನೆ ಬಂಗಾರದ ಸೀಮೆಯಾಚೆಗಾ. ಅಲ್ಲಿ ಹೋಗುವ ಪಯಣದಲ್ಲಿ ಅವಳು ಹಿಂದೆ ಬಿದ್ದಳಾ, ಅಲ್ಲಿ ಯಾಕೆ ಹೋಗಬೇಕು, ಅಲ್ಲಿ ಏನಿದೆ ಎಂದು ಕೇಳುತ್ತಲೆ ಕೊಳಲ ದನಿಗಳ ಸಂಜೆ ಹಾಡು ಕೇಳುವ ಸಲುವಾಗಿ ಎನ್ನುವ ಉತ್ತರವನ್ನೂ ಆತನೇ ನೀಡುತ್ತಾನೆ. ಸಂಜೆ ಹಾಡು ಎನ್ನುವುದು ಬದುಕಿನ ಇಳಿ ಸಂಜೆಯ ಕಾಲವೂ ಆಗಿರಬಹುದು. ನಿನಗೆ ನಾನು ನನಗೆ ನೀನು ಎನ್ನುವ ಆಸರೆ ಬಯಸುವ ಬದುಕ ಮುಸ್ಸಂಜೆಯಲ್ಲಿ ನಟನೆಯಿಂದ ಸಹಜತೆಗೆ ಅವಳನ್ನ ತರುವ ಪ್ರಯತ್ನದಲ್ಲಿ ಅವನಿದ್ದಾನಾ.
ಬಾ ಹತ್ತಿರ, ಬೆರಳ ಹಿಡಿದು, ಮುಂದೆ ಸಾಗು ಸುಮ್ಮನೆ.
ನಕ್ಕುಬಿಡು, ನೋಡುತ್ತಿದೆ ಲೋಕವೆಲ್ಲ ನಮ್ಮನೆ.
ಇದುವರೆಗೆ ಅವಳಿಗೆ ಹಾರೈಕೆಯನ್ನೂ, ಹಿಂದಿನ ನೆನಪುಗಳನ್ನು ಭವಿಷ್ಯದ ನಿರೀಕ್ಷೆಗಳನ್ನೆಲ್ಲ ಹೇಳುತ್ತ ಬಂದ ಅವ ಇಲ್ಲಿ ಅವಳಿಗೆ ಸೋತವನಂತೆ ಮಾತಾಡುತ್ತಾನೆ. ಬಾ ಹತ್ತಿರ ಎಂದು ಕರೆಯುತ್ತಾನೆ. ಅವ ಹಿಂದೆ ಹೋಗಿ ಅವಳನ್ನ ಕೈ ಹಿಡಿದು ತರಲಾರನಾ, ಕಳೆದ ಕಾಲದಲ್ಲಿ ಯಾರೂ ಹಿಂದಿರುಗಿ ಹೋಗಲಾರರೇನೋ. ದೂರ ಸಾಕು ಹತ್ತಿರವಾಗುವ ಎನ್ನುತ್ತಾನೆ. ಇದುವರೆಗೆ ನಾ ಮುನ್ನಡೆದೆ, ನಿ ಹಿಂದೆ ಬಿದ್ದೆ, ಇನ್ನು ಸಾಕು, ನೀನೇ ಬೆರಳು ಹಿಡಿದು ಮುನ್ನಡೆಸು ಎನ್ನುತ್ತಾನೆ. ಅವಳಲ್ಲಿ ಮತ್ತೆ ಸಹಜತೆ ಹುಟ್ಟದಿದ್ದರೂ ಅವಳಾದರೂ ಜೊತೆಗಿರಲಿ ಎನ್ನುವ ಹಂತಕ್ಕೆ ತಲಪುತ್ತಾನೆ. ನಕ್ಕ ಹಾಗೆ ನಟಿಸಬೇಡ ಎಂದವನೇ ಲೋಕವೆಲ್ಲ ನಮ್ಮನ್ನ ನೋಡುತ್ತಿದೆ ಅದಕ್ಕಾದರೂ ನಕ್ಕು ಬಿಡು ಎನ್ನುವಲ್ಲಿಗೆ ಮತ್ತೆ ನಟನೆಯನ್ನಾದರೂ ಒಪ್ಪುವ ಹಂತಕ್ಕೆ ಬರುತ್ತಾನೆ. ಅವಳನ್ನ ಒಲಸಿಕೊಳ್ಳಲಾಗದ ಅಸಹಾಯಕತೆಯಾಗಿ ಕಾಣುವ ಈ ಸಾಲು ಅವನ ಇದುವರೆಗಿನ ಪ್ರಯತ್ನವೆಲ್ಲ ಲೋಕ ನೋಡುತ್ತಿದೆ ಎನ್ನುವುದಕ್ಕಾಗಿಯೂ ಇರಬಹುದಾ ಎನ್ನಿಸುವಂತೆಯೂ ಮಾಡಿ ಮತ್ತೆ ಮೊದಲೊನಿಂದ ಕವನವನ್ನ ಓದುವಂತೆ ಮಾಡುತ್ತದೆ ಎನ್ನುವಲ್ಲಿಗೆ ಕವನ ಕೊನೆಯಾಗುತ್ತದೆ.
* * * * * * *
ಕವನವೊಂದು ತನ್ನ ಸಾಲುಗಳ ಮೂಲಕ ಬಿಡಿಬಿಡಿಯಾಗಿ ಧಕ್ಕುವುದೇ ಬೇರೆ, ಪೂರ್ಣವಾಗಿ ಸಮಗ್ರವಾಗಿ ಧಕ್ಕುವುದೇ ಬೇರೆ. ಇದುವರೆಗೆ ಬಿಡಿ ಸಾಲುಗಳಲ್ಲಿ ಏನೆಲ್ಲ ಹುಡುಕಿದ್ದೆವಲ್ಲ ಅದೆಲ್ಲ ಪೂರ್ಣತೆಯಲ್ಲಿ ಸರಳವಾಗಿ ಗೋಚರಿಸುತ್ತದೆ. ಕವನದೊಳಗೊಂದು ಕಥೆ ಸೇರಿ ಕಥನ ಕವನವಾಗಿ ನಮಗೆ ಕಾಣುತ್ತದೆ. ಕಥೆ ಇಷ್ಟೆ, ಅವಳು ಅವನು ಹತ್ತಿರದ ಎತ್ತರದ ಮನೆಗಳಲ್ಲಿ ಬೆಳೆದವರು, ಅಲ್ಲೆ ಎಲ್ಲೋ ಬೆಟ್ಟದಾಚೆಯ ಬಯಲಿನಲ್ಲಿ ಹಸುಗಳ ನಡುವಿನಲ್ಲಿ ಪ್ರೇಮ ಮೊಳೆತಿದೆ. ಜೊತೆ ನಡೆದಿದ್ದಾರೆ. ಜೊತೆ ನಡೆವ ಪಯಣದಲ್ಲಿ ಅವಳು ಹಿಂದೆ ಬಿದ್ದು ಅವ ಮುಂದೆ ನಡೆದಿದ್ದಾನೆ. ಈ ಹಿನ್ನಡೆ ಅವಳ ಸಹಜತೆಯನ್ನ ಕಳೆದಿದೆ. ಅದು ಅವನಿಗೆ ಅರ್ಥವಾಗುವಷ್ಟರಲ್ಲಿ ಅವಳು ಸಹಜತೆಗೆ ಮರಳಲಾಗದಷ್ಟು ಹಿಂದೆ ಉಳಿದಿರುವುದು ಗೊತ್ತಾಗಿದೆ. ಅವಳಿಗೆ ಹಾರೈಸುತ್ತಾನೆ, ಅನುನಯಿಸುತ್ತಾನೆ, ಊಹೂಂ ಅವಳು ಸಹಜತೆಗೆ ಮರಳಲಾರಳು, ಕೊನೆಗೆ ನೋಡುವ ಲೋಕದ ಕಾರಣಕ್ಕಾದರೂ ಜೊತೆ ನಡೆಯೋಣ ಎನ್ನುವಲ್ಲಿಗೆ ಕಥೆ ಅಂತ್ಯವಾಗುತ್ತದೆ.
ಇದು ಪ್ರೇಮ ಗೀತೆಯೂ ಅಗಬಹುದು, ದಾಂಪತ್ಯ ಗೀತೆಯೂ. ಆರಂಭದ ದಿನಗಳಲ್ಲಿ ಅವಳಿಗೆ ಅವನು ಅವನಿಗೆ ಅವಳು ಎನ್ನುವ ಪ್ರೇಮದ ಕಾಲ. ಒಮ್ಮೆ ಜೊತೆಯಾದೆವು ಎನ್ನಿಸಿದಾಗ ಪ್ರಾಮುಖ್ಯತೆ ಬದಲಾಗುತ್ತದೆ. ಜೊತೆಯಾಗುವವರೆಗೆ ಪರಸ್ಪರ ಪ್ರಾಮುಖ್ಯತೆ ಅವಳನ್ನ ಗೆಲ್ಲುವ ಹಪಹಪಿ. ಗೆದ್ದು ಜೊತೆಯಾದ ಮೇಲೆ ಭವಿತವ್ಯ ಕಾಡತೊಡಗುತ್ತದೆ. ಪುರುಷ ಮುಂದಿನ ಬದುಕಿನ ಸುಖಕ್ಕಾಗಿ ಅವಳನ್ನ ಬಿಟ್ಟು ಮುನ್ನಡೆಯುತ್ತಾನೆ. ಮುಂದಿನ ಸುಖದ ದಿನಗಳ ನಿರ್ಮಾಣ ಮಾಡುವಷ್ಟರಲ್ಲಿ ವೃದ್ದಾಪ್ಯ ಎದುರು ನಿಂತಿರುತ್ತದೆ. ಆಗ ಮತ್ತೆ ಆಸರೆ ಬೇಕು, ಅವಳನ್ನ ಹುಡುಕಿದರೆ ಅವಳು ಹಿಂದೆಯೇ ಉಳಿದುಬಿಟ್ಟಿದ್ದಾಳೆ. ಅವನಿಗೆ ತಪ್ಪೆಲ್ಲಿ ಆಗಿದೆ ಎಂದು ಗೊತ್ತಾಗುವಷ್ಟರಲ್ಲಿ ಸರಿ ಮಾಡಲಾಗದಷ್ಟು ದೂರ ನಡೆದಾಗಿರುತ್ತದೆ. ಹತ್ತಿರವಿದ್ದ ಭಾವಗಳು ಕಳೆದಿರುತ್ತವೆ. ಆದರೆ ಈ ಹಂತದಲ್ಲಿ ಆಯ್ಕೆಯಿಲ್ಲ. ಪರಸ್ಪರ ಆಸರೆ ಬೇಕು, ಜೊತೆ ನಡೆಯಲೇ ಬೇಕು. ಅದಕ್ಕಾಗಿ ಸರಿ ಮಾಡುವ ಒಂದು ಪ್ರಯತ್ನ, ಗೆದ್ದರೆ ಬದುಕು ಸುಂದರ, ಅಂತರಂಗಕ್ಕೆ ಬಹಿರಂಗದ ಆಸರೆ. ಇಲ್ಲದಿದ್ದರೆ ಲೋಕದ ಕಣ್ಣಿಗಾಗಿ ನಟನೆ, ಅಂತರಂಗಕ್ಕೆ ಹಳೆಯ ನೆನಪು ಅಷ್ಟೆ.
ಈ ಕವನದಲ್ಲಿ ಅವಳು ನಮಗೆ ಅಗೋಚರ ಪಾತ್ರ ಮಾತ್ರ. ಅವನು ಏನು ಹೇಳುತ್ತಿದ್ದಾನೆ ಎನ್ನುವುದರ ಮೇಲೆ ಅವಳ ಚಿತ್ರಣ ನಮ್ಮಲ್ಲಿ.‘ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ’ ಎನ್ನುವಲ್ಲಿ ಅವಳ ನಕ್ಕ ಹಾಗೆ ನಟಿಸುವ ಕಾರಣವನ್ನ ನಾವು ಹುಡುಕಿಕೊಳ್ಳಬೇಕು. ಅದರಾಚೆಗೂ ಕಾರಣವಿರಬಹುದು, ಅವ ಹೇಳುವುದಿಲ್ಲ. ಇದು ಅವನ ಅನಿಸಿಕೆ ಮಾತ್ರ ಇರಲೂಬಹುದು, ಅವಳ ನೋವು ಬೇರೆಯೇ ಇರಬಹುದು, ಅದು ಅವನಿಗೆ ಅರ್ಥವಾಗದಿರುವುದಕ್ಕೂ ಅವಳಿಗೆ ವಿಷಾದವಿರಬಹುದು.
ಇಲ್ಲಿಯೂ ಅವ ತಾನು ಮುನ್ನಡೆದೆ ಎನ್ನುವುದಿಲ್ಲ, ನೀನು ಹಿಂದೆ ಬಿದ್ದೆ ಎನ್ನುತ್ತಾನೆ. ಅವಳ್ಯಾಕೆ ಹಿಂದೆ ಬಿದ್ದಳು, ಅವ ಕಾರಣ ಹುಡುಕುವುದಿಲ್ಲ, ತನ್ನದೆ ಸರಿ ಎನ್ನುವ ಸಣ್ಣ ಅಹಂಕಾರ ಅವನಿಗೆ ಇರಲೂಬಹುದು. ಅವನೆ ಅವಳನ್ನ ಹಿಂದೆ ಬಿಟ್ಟಿರಲೂಬಹುದು. ಇದ್ಯಾವುದನ್ನು ಅವ ಹೇಳ ಹೋಗುವುದಿಲ್ಲ.‘ನೀನೆಲ್ಲು ನಿಲ್ಲಬೇಡ, ಹೆಜ್ಜೆ ಹಾಕು ಬೆಳಕಿಗೆ’ ಎನ್ನುವಾಗಲೂ ಅವನಿಗೆ ತಾನು ಬೆಳಕಲ್ಲಿದ್ದೇನೆ, ನೀನೂ ಬೆಳಕಿಗೆ ಚಲಿಸು ಎನ್ನುವ ಭಾವ, ಅವಳಿರುವಲ್ಲೂ ಬೆಳಕಿರಬಹುದಾ, ಇವನೆ ಕತ್ತಲಲ್ಲಿರಬಹುದಾ ಇವಾವುದು ಇಲ್ಲಿ ವ್ಯಕ್ತವಾಗುವುದಿಲ್ಲ. ಇಲ್ಲಿ ಸರಿ ಎನ್ನುವುದು ಅವನದು ಮಾತ್ರ ಎನಿಸುತ್ತದೆ. ಅವಳು ನಮಗೆ ಅವನ ಕಣ್ಣಿಂದ ಮಾತ್ರ ಕಾಣುತ್ತಾಳೆ ಅಷ್ಟೆ.
* * * * * * *
ಬರೆದ ಮೇಲೆ ಕವನವೆನ್ನುವುದು ಕವಿಯದಲ್ಲ, ಓದುಗನದು. ಕವಿ ಏನನ್ನೇ ಹೇಳ ಹೊರಟರೂ ಓದುಗ ಅದನ್ನ ತನ್ನ ಮನಸ್ಥಿತಿಯೊಂದಿಗೆ ಮಾತ್ರ ಅರ್ಥ ಮಾಡಿಕೊಳ್ಳುತ್ತಾನೆ. ಅದರಲ್ಲಿ ಕವಿ ಹೇಳ ಹೊರಟಿರುವುದೂ ಇರಬಹುದು, ಇಲ್ಲದೆಯೂ ಇರಬಹುದು. ಬರೆದ ನಂತರ ಕವಿ ಕೂಡ ಅವನ ಕವನದ ಓದುಗನೇ ಆಗುತ್ತಾನೆ, ಬರೆವಾಗಿನ ಭಾವದ ಆಚೆಗೂ ಅವನ ಕವನ ಅವನಿಗೆ ಕಾಣಲೂಬಹುದು. ಬರೆವಾಗಿನ ತಾಧ್ಯಾತ್ಮವೇ ಬೇರೆ, ಓದುವಾಗಿನ ಹೊಳಹುಗಳೇ ಬೇರೆ ಆಗಲೂಬಹುದು. ಕವಿಯು ಹೇಳಲಿಕ್ಕಿರುವುದೊಂದು ನನ್ನ ಅರ್ಥೈಸುವಿಕೆ ಇನ್ನೊಂದು ಆಗುವ ಎಲ್ಲ ಸಾಧ್ಯತೆಯನ್ನು ಗಮನಿಸುತ್ತಲೇ ಕೆ ಎಸ್ ನರಸಿಂಹಸ್ವಾಮಿಯವರ ‘ನಕ್ಕು ಬಿಡು’ ಕವನದೊಳಗೆ ನನ್ನನ್ನ ಕಳೆದುಕೊಂಡು ಹುಡುಕಿಕೊಳ್ಳುತ್ತಲಿದ್ದೇನೆ.
ಈ ಹುಡುಕಾಟದಲ್ಲಿ ಇಣುಕಿದ ಭಾವಗಳ ನಿಮ್ಮೆದುರು ಹರವಿ ಕೂತಾಗ ಮತ್ತೇನೋ ಧಕ್ಕೀತು ನನಗೆ ಎನ್ನುವ ನಂಬಿಕೆ. ಕೆಎಸ್ಎನ್ರ ಬಹುತೇಕ ಕವನಗಳಲ್ಲಿ ಬರುವಂತೆ ಇಲ್ಲಿಯೂ ಹಸಿರು, ಬಿಳಿ, ಕಂದು ಎನ್ನುವ ಬಣ್ಣಗಳು, ಮಲ್ಲಿಗೆ, ಬೆಳದಿಂಗಳು, ತಾರೆ, ಹಸು, ಕರು ಎನ್ನುವ ರೂಪಕಗಳು, ಸರಳವಾಗಿ ಓದಿಸಿಕೊಂಡು ಹೋಗುವ ಸಾಲುಗಳು ಇವುಗಳ ಬಗ್ಗೆ ಎಲ್ಲ ಮಾತನಾಡದೆ ಕೆಎಸ್ಎಸ್ರ ಇತರ ಕವನಗಳೊಂದಿಗೆ ಈ ಕವನದ ಸಾಮ್ಯತೆ ಹೋಲಿಕೆ ಇದಾವುದನ್ನೂ ಮಾಡದೆ ಈ ಕವನವೊಂದನ್ನೇ ಬಿಡಿ ಬಿಡಿಯಾಗಿ ನೋಡಿ ಹೀಗೆಲ್ಲ ಬರಹವಾಗಿದ್ದೇನೆ.
ಹೀಗೆ ಕಾಣುತ್ತ ಹೋದರೆ ಇನ್ನೂ ಏನೇನೋ ಕಂಡೀತು ಈ ಕವನದ ಸಾಲುಗಳಲ್ಲಿ. ಕಾಣ್ಕೆಗೆ ಮಿತಿಯಿರಬಾರದು ಆದರೆ ಈ ಬರಹಕ್ಕೆ ಇಷ್ಟು ಸಾಕು ಅಲ್ಲವೆ? ತುಂಬ ವಾಚ್ಯವೆನಿಸಿದರೂ ಇಷ್ಟು ಹೇಳದೆ ಉಳಿಯದಾದೆ ಎನ್ನುತ್ತ, ಅವಳು ಹತ್ತಿರ ಬಂದಳಾ, ಕೈ ಹಿಡಿದು ನಡೆದಳಾ, ಸಂಜೆ ಹಾಡು ಕೊಳಲ ದನಿಯ ಉಂಗುರವಾಯಿತಾ, ಲೋಕದ ಕಾಣ್ಕೆಯಾಚೆಗೂ ನಗು ಮೂಡಿತಾ ಎಂದೆಲ್ಲ ಸಂದೇಹಗಳನ್ನ ಮುಗಿದ ನಂತರವೂ ಹುಟ್ಟುಹಾಕಿಕೊಳ್ಳುತ್ತ ಕವನ ಎನ್ನುವುದು ಕಥನವಾಗಿ ಮುಂದುವರೆಯುತ್ತಲೇ ಹೋಗುತ್ತಿದೆ ನನ್ನೊಳಗೆ. ಬಹುಶಃ ನಿಮ್ಮೊಳಗೂ! ಒಳಗೊಂದು ಜೀವಭಾವ ತುಡಿಸುವ ಕೆಎಸ್ಎನ್ರ ನೆನಪಿಗೆ ಇದೊಂದು ನುಡಿ ಮಲ್ಲಿಗೆ ಅಷ್ಟೆ.
* * * * * * *
ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನದ ಶತಮಾನೋತ್ಸವದ ಆಚರಣೆಯ ಸಂಭ್ರಮದ ಭಾಗವಾಗಿ, ಅವರ ಕವನಗಳ ಹೊಸ ಓದು 'ಹೂ ಬುಟ್ಟಿ' ಎನ್ನುವ ಪುಸ್ತಕ ಬಿಡುಗಡೆಯಾಯಿತು. ಪುಸ್ತಕಕ್ಕಾಗಿ 'ದುಂಡು ಮಲ್ಲಿಗೆ' ಕವನ ಸಂಕಲನದಿಂದ ಆಯ್ದ 'ನಕ್ಕು ಬಿಡು' ಕವನದ ಬಗ್ಗೆ ನಾನು ಬರೆದಿದ್ದ ಬರಹ ಇದು.
ಇದೇ ಬರಹವನ್ನು ದಿನಾಂಕ:06.02.2015ರಂದು 'ಅವಧಿ'ಯಲ್ಲಿ ಪ್ರಕಟಿಸಲಾಗಿದೆ.