ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Wednesday 27 February 2013

ನಾಳೆಯ ಕನಸುಗಳಲ್ಲಿ ನಿನ್ನೆ ಮರೆವಾಗ…


ಜ್ಞಾನಜ್ವಾಲೆಯ ಶಿಶು//ರಘುನಂದನ ಕೆ.



“A Thing Lost is Valued The Most” ನಿಜ, ಕಳೆದ ವಸ್ತು ಯಾವಾಗಲೂ ಅತ್ಯಂತ ಬೆಲೆಯುಳ್ಳದ್ದು, ಅಥವಾ ಇಲ್ಲವಾದಾಗ ಮಾತ್ರ ಅದರ ಬೆಲೆ ಅರ್ಥವಾಗುತ್ತದೋ ಏನೋ. ಎಷ್ಟೋ ಸಲ ಅದು ನಮ್ಮೊಡನೆ ಇದ್ದುದರ ಅರಿವೂ ಇಲ್ಲದಂತೆ ಇದ್ದುಬಿಟ್ಟಿರುತ್ತೇವೆ ನಾವು.


ಈಗ ಬೆಂಗಳೂರಿನ ಎಷ್ಟೋ ರಸ್ತೆಗಳು ತಮ್ಮೊಡಲ ಮರಗಳನ್ನು ಕಳೆದುಕೊಂಡು ಝಳಪಿಸುತ್ತಿವೆ. ಎಷ್ಟೋ ವರ್ಷಗಳಿಂದ ಇದ್ದೂ ಇಲ್ಲದಂತಿದ್ದುಬಿಟ್ಟಿದ್ದ ಮರಗಳು ಅಭಿವೃದ್ಧಿಯ ಕನಸಿನ ನಾಳೆಗಾಗಿ ನಿಶ್ಯಬ್ದವಾಗಿ ಜಾರಿಹೋಗಿವೆ.

ಬಿದಿರ ಸೀಳಿ ಬುಟ್ಟಿ ನೇಯುವವರ ಆಸರೆಯಾಗಿ,
ಎಲೆಯ ಸಂದಿಯಿಂದ ಜಾರುವ ಬೆಳಕಿನ ಕಿರಣಗಳ ಹುಡುಕುತ್ತಿದ್ದ ಹರಿದ ತಡಿಕೆಯ ಗುಡಿಸಲಿನೊಳಗಿನ ಕಂದಮ್ಮಗಳ ಕಣ್ಣ ಬೆಳಕಾಗಿ,
ಹದಿಹರೆಯದವರ ಸ್ವಪ್ನ ಭೂಮಿಯ ಮಾತುಗಳಿಗೆ ಕಿವಿಯಾಗಿ,
ಹಕ್ಕಿಗಳ ಕಲರವಕ್ಕೆ ಎಲೆಗಳ ಮರ್ಮರವ ಸೇರಿಸುತ್ತ ಜೊತೆಯಾಗಿ ನಿಂತಿದ್ದ ಮರಗಳೆಲ್ಲ ಈಗ ಮುರಿದು ಬಿದ್ದಿವೆ, ಅಲ್ಲ ಕಡಿದು ಕೆಡವಲಾಗಿದೆ.

ಈಗ ಅಲ್ಲುಳಿದಿರುವುದು; ಉರುಳಿದ ಉಸಿರಿನ ಅವಶೇಷಗಳ ಚಡಪಡಿಕೆ ಮಾತ್ರಕಾಲೇಜಿನ ಮಕ್ಕಳೆಸೆದ ಕಸದಂತೆ, ಸೀಳಿಬಿದ್ದ ಬಿದಿರಿನ ಚೂರುಗಳಂತೆ.

* * * * * * * * 

ನಿಜ, ಇದ್ದಾಗ ಬೆಲೆ ಅರ್ಥವಾಗದು. ನಮ್ಮ ಹೆತ್ತವರು ಹೆಮ್ಮರದಂತೆ ನಮ್ಮ ಹಿಂದೆ ನಿಶ್ಶಬ್ದವಾಗಿ ನಿಂತಿರುವುದು ಮರೆತುಹೋಗಿದ್ದೇವೆ ನಾವೀಗ. ಅವರೂ ಮರಗಳಂತೆ ನಿಂತೇ ಇರುತ್ತಾರೆಬೆಳೆಯಬೇಕೆಂಬ ಧಾವಂತದಲ್ಲಿ ಮಗಮಗಳು ನಾಳೆಗಳ ಬೆನ್ನತ್ತಿ ಓಡುತ್ತ ತಮ್ಮನ್ನ ಮರೆತಾಗಲೂ.
ನಮ್ಮ ಭಾವನೆಗಳೇ ಅವರಿಗೆ ಅರ್ಥವಾಗುವುದಿಲ್ಲ, Genaration Gap ಅಂತ ತಿರಸ್ಕರಿಸಿದಾಗಲೂ,
ಸುಮ್ಮನೆ ಬಾಯಿ ಮುಚ್ಚಿಕೊಂಡಿರುತ್ತೀರಾಎನ್ನುತ್ತ ಕೋಪದ ಜ್ವಾಲೆಗಳ ಅಪ್ಪಳಿಸಿದಾಗಲೂ
ನಿಂತೇ ಇರುತ್ತಾರೆ,

ಮಕ್ಕಳು ಸೋತು ಹಿಂತಿರುಗಿದರೆ ಆಸರೆಗೆ, ಧೈರ್ಯಕ್ಕೆ, ಏನೋ ಬೇಕೆಂದು ತುಡಿವ ಮಕ್ಕಳ ಕಂಗಳ ಗೊಂದಲ ಕಳೆಯಲು ತಮ್ಮ ಬದುಕನ್ನೇ ಸವೆಸುತ್ತ, ಎಂದೋ ಒಂದು ದಿನ ನಿಶ್ಶಬ್ಧವಾಗಿ ಧರಶಾಯಿಗಳಾಗುತ್ತಾರೆ ಮರಗಳಂತೆ. ಅವರ ಬೆಲೆ ಈಗಲಾದರೂ ಅರ್ಥವಾದೀತಾ?


ಬಿಸಿಲ ಝಳ ಮೈ ಸುಡುವಾಗ, ಧೂಳು-ಹೊಗೆ ಆವರಿಸಿ ಕಣ್ತುಂಬುವಾಗ, ತಂಪ ನೀಡುತ್ತಿದ್ದ ಮರಗಳು ನೆನಪಾಗುತ್ತವೆ. ಉರುಳಿದ ಮರಗಳ ಕೊನೆಯುಸಿರು ಕಳೆವ ಮೊದಲೇ ನಾವು ಅವುಗಳ ಮರೆತು ಮತ್ತೆ ಜಂಜಾಟಗಳ ಹಿಂದೆ ಹೊರಟಿದ್ದೇವೆ.
  
ನಮ್ಮ ನಾಳೆಯ ಕನಸುಗಳಲ್ಲಿ ನಾವಿದ್ದೇವೆ, ನಮ್ಮ ಸಂಸಾರ, ಮಕ್ಕಳಿದ್ದಾರೆಅದರಲ್ಲಿ ಹಿಂದೆ ನಿಂತು ನಮ್ಮನ್ನೇ ಕನಸಾಗಿಸಿಕೊಂಡವರಿಲ್ಲ.
ಒಂದೊಮ್ಮೆ, ಅವರೂ ನಾಳೆಯ ಕನಸುಗಳಲ್ಲಿ ನಿನ್ನೆಗಳನ್ನ ಮರೆತಿದ್ದಿರಬಹುದೇ… 
ಗೊತ್ತಿಲ್ಲ, ನಾವಂತೂ ಮರೆತಿದ್ದೇವೆ.

ನಮಗೀಗ ಬಿಸಿಲ ಝಳ, ಹೊಗೆ-ಧೂಳುಗಳು ಅಭ್ಯಾಸವಾಗಿ ಬಿಟ್ಟಿವೆ. ತಿಂಗಳು ಕಳೆಯುವುದರೊಳಗೆ ಅಪ್ಪ-ಅಮ್ಮ ಮರೆತೇ ಹೋಗುತ್ತಾರೆ,
ಬದುಕು ಕೈ ಬೀಸಿ ಕರೆಯುತ್ತದೆ, ಕಾಲ ಸರಿಯುತ್ತಲೇ ಇರುತ್ತದೆ, ಮನಸ್ಸು ಹೀಗೆ ಏನೇನೋ ಧ್ಯಾನಿಸುತ್ತಲೇ ಇರುತ್ತದೆ.


* * * * * * * * *
ಚಿತ್ರಕೃಪೆ : ಅಂತರ್ಜಾಲ


 ಬರಹವನ್ನು ವಿಜಯ ಕರ್ನಾಟಕದ ದಿನಾಂಕ:21-12-2008 ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಿಸಲಾಗಿದೆ.

27.02.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯ ಪುಟಗಳಲ್ಲಿ ಓದಲು  ಲಿಂಕ್ ಬಳಸಿ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ - http://samudrateera.wordpress.com/ )