ರಾಧೆಯ ಮಡಿಲಲಿ ಮಲಗಿದ ಕೊಳಲು
ಮೌನ ರಾಗವ ಧ್ವನಿಸುತಿದೆ
ಮೋಹನನಿಲ್ಲದೆ ರಾಧೆಯ ಮನವು
ವಿರಹದುರಿಯಲಿ ನೋಯುತಿದೆ
ಬಾರದ ಕೃಷ್ಣನ ಹುಡುಕುತಿದೆ
ಕೊಳದಲಿ ಕಂಡಾ ಚಂದಿರ ಬಿಂಬದಿ
ಶ್ಯಾಮನ ಮೊಗವು ಕರಗುತಿದೆ
ಮಧುರೆಯ ಸೇರಿದ ಕೃಷ್ಣಗೆ
ರಾಧೆಯ ನೆನಪು ಬಾಡುತಿದೆ
ಪಾಂಚಜನ್ಯದಾ ನಾದದಿ
ಕೊಳಲಾ ಗಾನವು ಮರೆಯುತಿದೆ
ಅಂತಃಪುರದ ಮೋಹದ ತೆರೆಯು
ಮಧುರೆಯ ಮಧುರಸದಾ ಸ್ವಾದವು
ಗಡಿಗೆಯ ಮೊಸರಾ ಮರೆಸುತಿದೆ
ಕೃಷ್ಣನ ಕಾಯುತ ಶಿಲೆಯಾದಳು ರಾಧೆ
ಜಾರಿದ ಕಂಬನಿ ಆರುತಿದೆ
ಬತ್ತಿದ ಕೊಳಕೆ ಜೀವವ ತುಂಬಲು
ನೆನಪಿನ ಚಿಲುಮೆಯು ಸೋಲುತಿದೆ.
* * * * * * * *
ಕಾಲೇಜು ದಿನಗಳಲ್ಲಿ ಕವನವೆಂದರೆ ಪ್ರೇಮ. ಪ್ರೇಮವೆಂದರೆ ರಾಧಾ-ಕೃಷ್ಣ.
ಹೆಚ್ ಎಸ್ ವೆಂಕಟೇಶಮೂರ್ತಿಯವರ ಕವನ, ಅನಂತಸ್ವಾಮಿಯವರ ಭಾವಗೀತೆ ಎಲ್ಲಾ ರಾಧಾ-ಕೃಷ್ಣರಾಗಿ, ಪ್ರೇಮವಾಗಿ ಕಾಡುತ್ತಿದ್ದ ಕಾಲ.
ಬರಹದ ಮೊದಲ ಸಾಲುಗಳು ಚಿಗುರು ಮೀಸೆಯಂತೆ ಮೂಡುತ್ತಿದ್ದ ದಿನಗಳು.
2006ರ ಸಂಜೆಯೊಂದರಲ್ಲಿ ಬೀಸುವ ಗಾಳಿ ಎದೆಯಲ್ಲಿ ತಂದೆಸೆದ ಭಾವಗಳೇ ಕವನವಾಗಿ ಮೂಡಿ,
ಈಗ ಇಲ್ಲಿ ಸಮುದ್ರ ತೀರದ ಅಲೆಯ ಒಲುಮೆಯಾಗಿ ನಿಮ್ಮೆದುರು ರೆಕ್ಕೆ ಬಿಚ್ಚಿದೆ.
ಓದುವ ಪ್ರೀತಿಯಿರಲಿ. ಅಕ್ಷರ ನಮ್ಮೆಲ್ಲರ ಬೆಳೆಸಲಿ, ಬೆಳಗಿಸಲಿ.
ಚಿತ್ರಕೃಪೆ : ಅಂತರ್ಜಾಲ