ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday 4 October 2011

ಹೀಗೊಂದು ಕವಿತೆ




ದೇವಾಮೃತ ಗಂಗೆ//ಕಾವ್ಯ-ಲಹರಿ

ಕೆಂಪು ಗುಲ್ ಮೋಹರ್ ಮರದ
ಬುಡದಲ್ಲಿ ಕಪ್ಪು ನೆರಳ
ಪಕಳೆ ಚೆಲ್ಲಾಡಿದೆ
ಯಾರದೋ ಪಾದದಡಿ ನಲುಗಿದ
ಹೂವ ನೋವ ಘಮ
ಗಾಳಿಯಲ್ಲಿನ್ನೂ ಸರಿದಾಡಿದೆ


ರಥಚಕ್ರದಡಿ ಅಪ್ಪಚ್ಚಿಯಾದ
ಹೂವ ನೋವಿಗೆ
ಭಕ್ತಿ-ಮುಕ್ತಿಯ ಬಣ್ಣ ಬಳಿವ ಮಂದಿ
ಮೃದು ಉಸಿರುಗಳ
ಸಮಾಧಿಯ ಮೇಲೆಯೇ ಸಾಗಬೇಕೇ
ಭಕ್ತಿಯ ಹಾದಿ....!!??


ಅರಿವಿಗೆ ನಿಲುಕಿ ಉಳಿದ ಗತ
ಇಲ್ಲಿ ಈಗ ಇತಿಹಾಸ
ಮೌನ ಸಂಗತಿಗಳಿಗಿಲ್ಲ ಜಾಗ
ದೇವರಿದ್ದ ಜಾಗದಲ್ಲೇ ದೇವದೂತ
ಮಂದಿರ ಉರುಳಿ ಬಸ್ತಿಯಾಗಿ
ಬಸ್ತಿ ಕಳೆದು ವಿಲಾಸ ಮಂಟಪವಾಗಿ
ಕೊನೆಗೊಮ್ಮೆ ಸರಿವ ಕಾಲದಡಿ
                                              ಪಾಳುಗುಡ್ಡೆಯಾಗಿ ಅನಾಥ

ಪರಮಾರ್ಥದ ಅರ್ಥ ಹೇಳುವ 
ಸ್ವಯಂ ಪಂಡೀತರು
ವಿಪರೀತಾರ್ಥಗಳ ಸೃಷ್ಟಿಸುವ
ವಿಚಿತ್ರ ಸೋಜಿಗ ಜಗ
ಆರತಿಯ ಜ್ವಾಲೆ 
ಹೂವ ಸುಡುವ ಬೆಂಕಿಯೂ....!!


                          
ಎಲ್ಲ ತೊರೆದವರ ಹಿಂದೆ
ಕೊಡುವ ಜನರ ಸಾಲು ಸಾಲು
ಹನಿ ನೀರ ಸಿಂಚನಕೆ ಕಾಯ್ವ
ಎಳೆಗಿಡದ ಬಯಕೆಗಿಲ್ಲಿ
ಬೆಲೆಯಿಲ್ಲ, ಕೊಡಲು ಪುರುಸೊತ್ತಿಲ್ಲ
ಇಲ್ಲಿ ಎಲ್ಲವೂ ಹೀಗೇ..
ವಿಚಿತ್ರ, ಕಲಸುಮೇಲೊಗರದ ಚಿತ್ರ
ಇದ್ದುದೆಲ್ಲವ ಬಿಟ್ಟು ನೆಟ್ಟಗೆ ನಿಂತ
ಗೊಮ್ಮಟನಿಗೆ ನಿರಂತರ ಮಸ್ತಕಾಭಿಷೇಕ....!!


2 comments:

  1. ಯಾರದೋ ಪಾದದಡಿ ನಲುಗಿದ
    ಹೂವ ನೋವ ಘಮ
    ಗಾಳಿಯಲ್ಲಿನ್ನೂ ಸರಿದಾಡಿದೆ

    ಅದ್ಭುತ ಸಾಲುಗಳು.....

    ಆಗ್ಲಿ ಇನ್ನಾದ್ರು ಮತ್ತೆ ಮತ್ತೆ ಬರ್ತಾ ಇರ್ಲಿ......
    ಉತ್ಸುಕತೆಯಲ್ಲಿದ್ವೋ ಊರ ಕಡೆ.......

    supper ham............

    ReplyDelete
  2. Tumba adbhuta saalugalu Raghunandananna....

    ReplyDelete

ನಿಮ್ಮ ಅನಿಸಿಕೆ