ಸಾಗರ ಸಮ್ಮುಖ//ರಘುನಂದನ
ಕೆ.


* * * * * * * * * *

ಬದುಕಿನಲ್ಲೂ ಹೀಗೇಯೇ, ದೊಡ್ಡ ಸಂಗತಿಗಳೆಲ್ಲ ದೊಡ್ಡವರಂತೆ ಪ್ರಖರವಾಗಿಯೇ ಉರಿಯುತ್ತದೆ, ಸೂರ್ಯನಂತೆ. ದೂರದಲ್ಲಿ ಪಡೆದವರಿಗೆ ಬೆಳಕು, ಹಿತವಾದ ಶಾಖ. ಹತ್ತಿರ ಹೋದಂತೆ ಪ್ರಖರತೆಯ ತಾಪ. ಹತ್ತಿರವಿದ್ದೂ ತಡೆದವ ಬೆಳೆದಾನು. ತಡೆಯಬಲ್ಲವ ಮಾತ್ರ ಶಾಖವನ್ನೂ ಕರಗಿಸಿ ತಂಪಾಗಿಸಿಯಾನು. ಚಂದ್ರ ಬೆಳಕಿನ ಪರಿವರ್ತನೆಗೊಂದು ಮಾಧ್ಯಮ. ಸ್ವಂತದ್ದಲ್ಲ ಆದರೂ ಚಂದ್ರಮನ ಬೆಳಕು ಹಿತ. ಭೂಮಿಗಿಂತ ಹತ್ತಿರದಿಂದ ಕಂಡವ ಸೂರ್ಯನ ಆತ. ಅವನೊಡಲಿಗೆ ಬೀಳ್ವ ಬೆಳಕು ಪ್ರಖರವೇ ಇದ್ದೀತು. ಪ್ರಖರತೆ ಅವನ ಹಾಯ್ದು ಬರುವಾಗ ತಂಪು. ಮಾಧ್ಯಮವಾಗುವುದು ಸುಲಭವಲ್ಲ. ತನ್ನದಲ್ಲದ್ದನ್ನ ಹಂಚುವುದೂ ಸಾಧನೆಯಲ್ಲದ್ದಲ್ಲ. ಎಲ್ಲ ಸೂರ್ಯರಾಗದಿರಬಹುದು, ಚಂದ್ರನಾಗುವುದು ಕಡಿಮೆಯದ್ದಲ್ಲ.
* * * * * * * * *
ಚಂದ್ರ ಬುದ್ಧಿಯ ಕೆಣಕುತ್ತಾನೆ, ಸೂರ್ಯ ಹೃದಯವನ್ನ ಬೆಳಗುತ್ತಾನೆ. ಮನಸ್ಸಿನ ದೇವತೆ ಬುದ್ಧಿಯ ಕೆಡಿಸಲೂ ಬಲ್ಲ, ಉಳಿಸಲೂ ಬಲ್ಲ. ಜ್ಞಾನದ ದೇವತೆ ಉರಿಸಲೂ ಬಲ್ಲ, ಬೆಳಗಲೂ. ತಂಪೆರೆಯುವುದೆಲ್ಲ ಬದುಕಿಸುವುದಿಲ್ಲ, ಸುಡುವುದೆಲ್ಲ ಕೊಲ್ಲುವುದೂ ಇಲ್ಲ. ಯಾರಿಗೆ ಯಾರು ಕಡಿಮೆ. ಹೊಳೆವುದು ಬೇರೆ, ತಿಳಿವುದು ಬೇರೆ. ಹೊಳೆಯುವುದು ಹೃದಯದ ಹಸಿವೆ, ತಿಳಿವುದು ಬುದ್ಧಿಯ ಕಸರತ್ತು. ಹೃದಯ ಹಸಿದಾಗ ಹೊಳೆದದ್ದು ಸಿಕ್ಕೀತು. ಹೊಳೆದದ್ದು ಬುದ್ಧಿಗೆ ನಿಲುಕಿದಾಗ ತಿಳಿವು ಧಕ್ಕೀತು. ಒಂದು ಜ್ಞಾನ, ಇನ್ನೊಂದು ವಿಜ್ಞಾನ. ಜ್ಞಾನವಿಲ್ಲದೆ ವಿಜ್ಞಾನವಿಲ್ಲ. ಹೃದಯ ನಿಂತಂದು ಬುದ್ಧಿ ಓಡುವುದಿಲ್ಲ. ಬುದ್ಧಿಗೆ ಶಕ್ತಿ ಹೃದಯ ಬಡಿತದಿಂದ. ಹೃದಯದಲ್ಲಿ ಹಸಿವೆ ಇದ್ದವ ಬೆಳೆದಾನು, ಬುದ್ಧಿ ಹಸಿದವ ಕಳೆದಾನು.
ಒಂದು ಹಗಲ ಬೆಳಕು, ಇನ್ನೊಂದು ಇರುಳ ಬೆಳಕು. ಜೀವರಾಶಿಯ ಬದುಕಿಗೆ ದಿನನಿತ್ಯದ ದೀಪಾವಳಿ. ಕಲಿಕೆಗೆ ಹಗಲು ರಾತ್ರಿಗಳ ಪಾಠ. ಕಾಲನ ದಾರಿಯಲ್ಲಿ ಕಲಿಕೆ ನಿರಂತರ. ಒಂದಕ್ಕೊಂದು ಬೆಸೆದು ಒಂದರೊಳಗೊಂದು ಸೇರಿ ವಿಶ್ವ ಚಲನೆಯ ಸೂತ್ರ. ಇಲ್ಲಿ ಅಲ್ಲದ್ದು ಇಲ್ಲ, ಎಲ್ಲವೂ ಸಲ್ಲುವಂತದ್ದೆ. ಒಳಗಿನ ಉರಿ ಜಗವನ್ನೇ ಬೆಳಗೀತು. ಇಲ್ಲವೆ ಮಾಧ್ಯಮವಾಗುವಷ್ಟಾದರೂ ಧಕ್ಕೀತು. ಚಲನೆ, ಬೆಳವಣಿಗೆ ಜೀವಂತಿಕೆಯ ಲಕ್ಷಣ. ಅಂತರಂಗದಲ್ಲೂ ಬಹಿರಂಗದಲ್ಲೂ ಚಲನೆ ನಿಲ್ಲದಿರಲಿ. ನುಡಿವ ಬೆರಗಲ್ಲೂ ನಡೆವ ಪಥ ತೆರೆಯಲಿ. ಬೆಳಕ ಪಥ ಬದುಕನ್ನ ಪ್ರಚೋದಿಸಲಿ.
* * * * * * * * * *
ದಿನಾಂಕ: 02.12.2014ರಂದು 'ಅವಧಿ'ಯಲ್ಲಿ ಪ್ರಕಟಿಸಲ್ಪಟ್ಟಿದೆ.
ದಿನಾಂಕ: 02.12.2014ರಂದು 'ಅವಧಿ'ಯಲ್ಲಿ ಪ್ರಕಟಿಸಲ್ಪಟ್ಟಿದೆ.
ಚಿತ್ರಕೃಪೆ : ಅಂತರ್ಜಾಲ
No comments:
Post a Comment
ನಿಮ್ಮ ಅನಿಸಿಕೆ